Sunday, November 13, 2011

ಶಂಕರ್ ನಾಗ್ - ಒಂದು ನೆನಪು!!

ಶಂಕರ್ ನಾಗ್ ಹುಟ್ಟಿದ್ದು Nov 9 - 1954. ಊರು ಉತ್ತರ ಕನ್ನಡ ಜಿಲ್ಲೆಯ ಕುಮಟ ಹತ್ತಿರದ ಮಲ್ಲಾಪುರ್ ಎಂಬ ಊರು. ಕೆಲಸ ಮಾಡಲೆಂದು ಆಯ್ಕೆ ಮಾಡಿಕೊಂಡ ಊರು ಬಾಂಬೆ. ಅಲ್ಲಿ ತಮ್ಮ ಅಣ್ಣ ಅನಂತ್ ನಾಗ್ ಜೊತೆ ಇರುತ್ತಿದರು. ಅಣ್ಣನಂತೆ ನಾಟಕ ರಂಗ ಮತ್ತು ಬ್ಯಾಂಕ್ ಒಂದರಲ್ಲಿ ಕೆಲಸ  ಮಾಡುತ್ತಿದ್ದರು. ಅನಂತ್ ನಾಗ್ ತಮ್ಮ ನಟನಾ  ಕಲೆಯನ್ನು ಹಿಂದಿ ಚಿತ್ರೋದ್ಯಮದಲ್ಲಿ ಮೊದಲು ಬಾರಿಗೆ ಶ್ಯಾಮ್ ಬೆನೆಗಲ್ ಅವರ "ಅಂಕುರ್" ಚಿತ್ರದಲ್ಲಿ ತೋರಿಸಿದರು. ಅಲ್ಲಿಂದ ಶುರುವಾದ ಅವರ ಚಿತ್ರ ಜೀವನ - ಸುಮಾರು ಹಿಂದಿ ಚಿತ್ರಗಳಲ್ಲಿ ನಟಿಸಿದರು. ಅದರಲ್ಲಿ ಬಹುತೇಕ ಶ್ಯಾಮ್ ಬೆನೆಗಲ್ ಅವರ ಚಿತ್ರಗಳೇ. ನಂತರ ಅವರಿಗೆ ಕನ್ನಡ ಚಿತ್ರರಂಗದಿಂದ ಅವಕಾಶಗಳು ಒದಗಿ ಬಂದವು. ಬಹುಬೇಗ ಕನ್ನಡದಲ್ಲಿ ಯಶಸ್ವೀ ನಾಯಕರಾದರು. ಅನಂತ್ ನಾಗ್ ಮುಂಬೈ ಇಂದ  ಬೆಂಗಳೂರಿಗೆ ಬಂದು ನೆಲೆಸಿದರು. ಆಗ ತಮ್ಮ ಜೊತೆ ತನ್ನ ಪ್ರೀತಿಯ ತಮ್ಮನನ್ನು ಅವನ ಕೆಲಸ ಬಿಡಿಸಿ ಕರೆದುಕೊಂಡು ಬಂದರು. ಆಗಿನ ಕಾಲದಲ್ಲಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುವುದು ಎಂದರೆ ಹೆಮ್ಮೆಯ ವಿಷಯ. ಅದನ್ನು ಇಬ್ಬರೂ ಬಿಟ್ಟು ಬೆಂಗಳೂರಿಗೆ ಬಂದರು!!  

ಅವರು ಚಲನಚಿತ್ರ ರಂಗಕ್ಕೆ ನಟನಾಗಿ ಬಂದಿದ್ದು ಆಕಸ್ಮಿಕ. ಶಂಕರ್  ನಾಗ್ ಅವರಿಗೆ ನಾಯಕ ನಟ ನಾಗಿಸಲು ಅವರ ಅಣ್ಣ ಅನಂತ್ ನಾಗ್ ಮುಂಬೈ ಇಂದ ಕರೆ ತಂದಿದ್ದರು, ಆದರೆ ಚಿತ್ರ ನಿರ್ದೇಶಕನಾಗುವ ಬಯಕೆ ಇಂದ ಅವರು ಬಾಂಬೆ ಯಲ್ಲಿ ಮಾಡುತ್ತಿದ್ದ ಬ್ಯಾಂಕ್ ಕೆಲಸವನ್ನು ಬಿಟ್ಟು ಬಂದಿದ್ದು!! ಹಾಗಾಗಿ ಅವರು ಹೆಚ್ಚ್ ಹೆಚ್ಚು ನಿರ್ದೇಶಕರ ಜೊತೆ ಒಡನಾಟ ಇಟ್ಟುಕೊಂಡಿದ್ದರು.  ಗಿರೀಶ್ ಕಾರ್ನಾಡ್ ಅವರು ನಿರ್ದೇಶನ ಮಾಡುತ್ತಿದ್ದ ಹೊಸ ಚಿತ್ರಕ್ಕೆ ನವಯುವಕನನ್ನು ಹುಡುಕುತ್ತಿದ್ದರು. ಅವರ ಕಣ್ಣಿಗೆ ಕಂಡಿದ್ದು ತಮ್ಮ ಹತ್ತಿರವೇ ಪಾದರಸದಂತೆ  ಚುರುಕಾಗಿ ಓಡಾಡಿಕೊಂಡಿದ್ದ  ಶಂಕರ!! ಅವನಿಗೆ ಹೇಳಿಯೂ ಬಿಟ್ಟರು ಹೊಸ ಚಿತ್ರಕ್ಕೆ ನೀನೆ ನಾಯಕ, ಮಾಡು ಅಂತ. ಆದರೆ ಶಂಕರ ಒಪ್ಪಲ್ಲಿಲ್ಲ  ಬದಲಿಗೆ "ನಾನು ನಿಮಗೆ ಸಹಾಯಕ ನಿರ್ದೇಶಕ ನಾಗುತ್ತೇನೆ - ಆದರೆ ನಟಿಸಲು ನಾನೊಲ್ಲೆ". ಕೊನೆಗೆ ಹಾಗೂ ಹೀಗೂ ಕಾಡಿ ಬೇಡಿ ಶಂಕರ ನನ್ನು ಒಪ್ಪಿಸಿದರು. ಆ ಚಲನ ಚಿತ್ರದ ಹೆಸರು " ಒಂದಾನೊಂದು ಕಾಲದಲ್ಲಿ"!!


ಈ ಚಿತ್ರವು  ದಾಂಡೇಲಿ ಮತ್ತು ಬೆಳಗಾವಿ ಹತ್ತಿರದ ತುರಮುರಿ ಮತ್ತು ಹುನಸಿಕಟ್ಟಿ ಎಂಬ ಗ್ರಾಮದಲ್ಲಿ ಚಿತ್ರೀಕರಣ ಗೊಂಡಿದ್ದು. ವಿಶೇಷವೆಂದರೆ ಈ ಚಿತ್ರದಲ್ಲಿರುವ  ಗೌಡರ ವಾಡೆಯನ್ನು ತುಂಬಾ ಚೆನ್ನಾಗಿ ಚಿತ್ರೀಕರಿಸಿದ್ದರೆ. ಅದನ್ನು ಇಂದಿಗೂ ತುರಮುರಿ ಯಲ್ಲಿ ನೋಡಬಹುದು.




ತಾನು ಅಳಕುತ್ತ ಒಪ್ಪಿ ನಟಿಸಿದ ಚಿತ್ರಕ್ಕೆ ಅವರಿಗೆ ಅಂತಾರಾಷ್ಟ್ರೀಯ ಮನ್ನಣೆ ಮತ್ತು ಗೌರವ ತಂದು ಕೊಟ್ಟಿತು. ಬಂಡಾಯ ಕಥೆಯಾದ ಈ ಚಿತ್ರದಲ್ಲಿ 24 ರ ಹರೆಯ ಶಂಕರ್ ನಾಗ್ ಲೀಲಾಜಾಲವಾಗಿ ನಟಿಸಿದರು. ನಮ್ಮನ್ನೆಲ್ಲ 36 ನೆ ವಯಸ್ಸಿಗೆ ಅಗಲುವ ಮುನ್ನ ಶಂಕರ್ ನಾಗ್ 72 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾಲ್ಗುಡಿ ಡೇಸ್, ಮಿಂಚಿನ ಓಟ, ಆಕ್ಸಿಡೆಂಟ್ ದಂಥ ಅದ್ಭುತ ಧಾರವಾಹಿ ಮತ್ತು ಚಲನಚಿತ್ರಗಳಲ್ಲಿ ತಮ್ಮ ನಿರ್ದೇಶನದ ಸಾಮರ್ಥ್ಯವನ್ನು ತೋರಿಸಿದ್ದಾರೆ. ಬಹಳಷ್ಟು ಜನರಿಗೆ ಗೊತ್ತಿಲ್ಲ ಡಾ.ವಿಷ್ಣುವರ್ಧನ ಅವರು ಮಾಲ್ಗುಡಿ ಡೇಸ್ ನಲ್ಲಿ ಅಬಿನಯಿಸಿದ್ದಾರೆ!! ಹಾಗೂ ಡಾ.ರಾಜಕುಮಾರ್ ಅವರ ಅಭಿನಯದ ೨೦೦ ನೇ  ಚಿತ್ರವಾದ "ಒಂದು ಮುತ್ತಿನ ಕಥೆ" ನಿರ್ದೇಶನ ಮಾಡಿದ್ದೂ ಶಂಕರ್ ನಾಗ್ ಅವರು.  ಅಂಥ ಹಿರಿಯರೂ ಶಂಕರ್ ನಾಗ್ ಮೇಲೆ ಅಷ್ಟೊಂದು ನಂಬಿಕೆ ಹೊಂದಿದ್ದರು.    

ಈ ಮುಖಾಂತರ ನಿಮಗೆಲ್ಲ ಶಂಕರ್ ನಾಗ್ ಅವರ ಪ್ರಥಮ ಚಿತ್ರ "ಒಂದಾನೊಂದು ಕಾಲದಲ್ಲಿ" ಕೆಲವು ಚಿತ್ರಗಳನ್ನು ಒಟ್ಟಿಗೆ ಇಲ್ಲಿ ಇಡುತ್ತಿದ್ದೇನೆ.

ಕೊನೆಯ ಮಾತು: ಪ್ರತಿಯೊಬ್ಬ ಕನ್ನಡಿಗರು ತಮ್ಮ ಜೀವನದಲ್ಲಿ ಒಂದಿಲ್ಲ ಒಂದು ಸಾರಿ ಅಂದುಕೊಂಡಿರುತ್ತಾರೆ  "ಇವತ್ತು ಶಂಕರ್ ನಾಗ್ ಇದ್ದಿದ್ದರೆ ನಮ್ಮ ಕನ್ನಡ ಚಿತ್ರರಂಗ ಇಂದು ಪೂರ್ತಿ ಬೇರೆಥರಾನೇ ಇರುತ್ತಿತ್ತು"!!




















ಇಂತಹ ಮಹಾನ್ ನಿರ್ದೇಶಕ, ನಟ ಈಗ ನಮ್ಮ ನಿಮ್ಮ ನೆನಪು ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಯವರಿಗೆ ನಾವು ತೋರಿಸಬಹುದಾದ ಒಂದು ಚೇತನ!!

ಇಂತಿ ನಿಮ್ಮ
ರಾಜು